ರಾಜ್ಯದಲ್ಲಿ ವಿಧಾನಸಭೆಯ ವಿಪಕ್ಷ ನಾಯಕನ ಆಯ್ಕೆ ವಿಚಾರ ಬಿಜೆಪಿಗೆ ಕಗ್ಗಂಟಾಗಿದೆ.
ರಾಜ್ಯದಲ್ಲಿ ವಿಧಾನಸಭೆಯ ವಿಪಕ್ಷ ನಾಯಕನ ಆಯ್ಕೆ ವಿಚಾರ ಬಿಜೆಪಿಗೆ ಕಗ್ಗಂಟಾಗಿದೆ.
ಬೆಂಗಳೂರು :
ರಾಜ್ಯದಲ್ಲಿ ವಿಧಾನಸಭೆಯ ವಿಪಕ್ಷ ನಾಯಕನ ಆಯ್ಕೆ ವಿಚಾರ ಬಿಜೆಪಿಗೆ ಕಗ್ಗಂಟಾಗಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ಬಿಜೆಪಿಯ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದೆ ಹೀಗಾಗಿ ಹೇಗಾದ್ರೂ ಮಾಡಿ ವಿಪಕ್ಷ ನಾಯಕನನ್ನ ಒಂದು ವಾರದ ಒಳಗೆ ಆಯ್ಕೆ ಮಾಡಲೇ ಬೇಕು ಎಂಬ ನಿರ್ಧರಕ್ಕೆ ಬಿಜೆಪಿ ಬಂದಿದೆ ಎಂದು ಬಿಜೆಪಿಯ ಮೂಲಗಳು ಹೇಳುತ್ತಿವೆ. ಈಗಾಗಲೇ ಹಲವರ ಹೆಸರುಗಳು ಕೇಳಿ ಬರುತ್ತಿದ್ದರೂ ಬಿಜೆಪಿ ವರಷ್ಠರು ಅಧಿಕೃತವಾಗಿ ಇದುವರೆಗೆ ಯಾವುದೇ ಹೆಸರನ್ನು ಫೈನಲ್ ಮಾಡಿಲ್ಲ.. ಇದೇ ವೇಳೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಬ್ಯಾಟ್ ಬೀಸಿದ್ದಾರೆ.
ಆದರೆ ಇದು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಎಂದು ಬಿಜೆಪಿಯ ಕೆಲ ಶಾಸಕರೇ ಹೇಳುತ್ತಿದ್ದಾರೆ ಎನ್ನಲಾಗಿದೆ. ಸದ್ಯದ ಮಟ್ಟಿಗೆ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆಗೆ ಹಲವರ ಹೆಸರುಗಳು ಈಗ ಮುನ್ನಲೆಗೆ ಬಂದಿದೆ. ಈಗ ಕೇಳಿ ಬಂದಿರುವ ಹೆಸರುಗಳಲ್ಲಿ ಯಾರಾದರು ಒಬ್ಬರು ವಿಪಕ್ಷ ನಾಯಕನಾಗಬಹುದು ಅಥವಾ ಹೈಕಮಾಂಡ್ ಅಚ್ಚರಿಯ ಹೆಸರನ್ನ ಸೂಚಿಸಬಹುದು ಎಂಬ ಮಾತುಗಳು ಕೂಡ ಕೇಳಿ ಬರ್ತಾ ಇದ್ದು, ಈ ಬಗ್ಗೆ ಹೈಕಮಾಂಡ್ ಯಾವ ನಡೆಯನ್ನ ಅನುಸರಿಸಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.
ಆದರೆ ಸದ್ಯದ ಮಟ್ಟಿಗೆ ಈಗಂತು ಬಿಜೆಪಿಯಲ್ಲಿ ಪ್ರಬಲರ ಹೆಸರುಗಳು ಕೇಳಿ ಬರುತ್ತಿದ್ದು, ಇವರಲ್ಲಿ ಯಾರು ನಾಯಕರಾಗಲಿದ್ದಾರೆ ಎಂಬ ಕುತೂಹಲ ಈಗ ಬಿಜೆಪಿ ಕಾರ್ಯಕರ್ತರಲ್ಲಿ ಮನೆ ಮಾಡಿದೆ. ಹೀಗೆ ಕೇಳಿ ಬರುತ್ತಿರುವ ನಾಯಕರ ಹೆಸರುಗಳು ಹೀಗಿವೆ.
ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವಿಪಕ್ಷ ನಾಯಕನಾಗಿ ಮುಂದುವರೆಯಲಿ ಅಂತ ಹಲವು ಮಂದಿ ಈಗಾಗ್ಲೇ ಹೇಳೋದಕ್ಕೆ ಪ್ರಾರಂಭ ಮಾಡಿದ್ದಾರೆ. ಇದಕ್ಕೆ ಪ್ರಮುಖವಾದ ಕಾರಣ, ಈ ಹಿಂದಿನ ಚುನಾವಣೆ. ಇದು ಅಚ್ಚರಿಯಾದ್ರು ನಿಜ.. ಸಾಕಷ್ಟು ಮಂದಿ ಈ ಹಿಂದಿನ ಚುನಾವಣೆಯನ್ನ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಎದುರಿಸಿದ್ದೇವೆ ಮತ್ತು ಅವರ ಸೋಲನ್ನ ಅನುಭವಿಸಿದ್ದೇವೆ, ಬಿಜೆಪಿಯ ಸೋಲಿಗೆ ಹಲವು ನಾಯಕರು ಪ್ರಮುಖವಾದ ಕಾರಣವಾಗಿದ್ರೂ ಬಸವರಾಜ ಬೊಮ್ಮಾಯಿ ಅವರೇ ಸೋಲಿನ ಹೊಣೆಯನ್ನ ಹೊತ್ತುಕೊಂಡಿದ್ದೇನೆ ಎಂದಿದ್ದಾರೆ. ಹೀಗಾಗಿ ಅವರೇ ಸಮರ್ಥ ನಾಯಕ ಎಂದು ಹೇಳುತ್ತಿದ್ದಾರೆ.
ಇದರ ಜೊತೆಗೆ ಬಸವರಾಜ ಬೊಮ್ಮಾಯಿ ಅವರನ್ನ ಹೊರತು ಪಡಿಸಿ ಬೇರೆ ಯಾರನ್ನಾದ್ರು ನಾಯಕನನ್ನಾಗಿ ಮಾಡಿದ್ರೆ ಮುಂದಿನ ದಿನಗಳಲ್ಲಿ ಇದು ವಿವಾದವನ್ನ ಸೃಷ್ಟಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಇದೇ ಕಾರಣದಿಂದ ಸದ್ಯದ ಮಟ್ಟಿಗೆ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದೇ ಸೂಕ್ತ ಎಂಬ ನಿರ್ಧಾರದಲ್ಲಿ ಹಲವು ಹಿರಿಯ ನಾಯಕರು ಇದ್ದಾರೆ ಎನ್ನಾಲಾಗುತ್ತಿದೆ.
ಬಸವನಗೌಡ ಪಾಟೀಲ ಯತ್ನಾಳ
ಒಂದು ಕಡೆ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಅಂತ ಸಾಕಷ್ಟು ಮಂದಿ ಹೇಳ್ತಾ ಇದ್ರು, ಇನ್ನೂ ಹಲವು ಮಂದಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಕಳೆದ ಬಾರಿಯ ಚುನಾವಣೆಯನ್ನ ಸೋತಿದ್ದೇವೆ ಹಾಗಾಗಿ ಅವರಿಗೆ ವಿಪಕ್ಷ ನಾಯಕನ ಸ್ಥಾನ ಕೊಡೋದು ಬೇಡ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಹೀಗಾಗಿ ಅಧಿವೇಶನ ಸಂದರ್ಭದಲ್ಲಿ ಅನೇಕ ಬಾರಿ ಆಡಳಿತ ಪಕ್ಷದ ಭಾಗವಾದರೂ ಸಹ ಮುಲಾಜಿಲ್ಲದೇ ಸರ್ಕಾರದ ಆಡಳಿತ ಯಂತ್ರ, ಬಿಜೆಪಿ ಪ್ರಭಾವಿ ನಾಯಕರ ವಿರುದ್ಧವೂ ಗುಡುಗಿದ್ದ ಬಸವನಗೌಡ ಪಾಟೀಲ ಯತ್ನಾಳ ವಿಪಕ್ಷ ಸ್ಥಾನಕ್ಕೆ ಸೂಕ್ತ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗ್ತಾ ಇದೆ. ಈಗ ಅವರಿಗೆ ಅಧಿಕೃತವಾದ ಪ್ರತಿಪಕ್ಷ ನಾಯಕನ ಸ್ಥಾನದ ಬಲ ದೊರಕಿದರೆ ಇನ್ನಷ್ಟೂ ಬಲವಾಗಿ ಪ್ರತಿಪಕ್ಷ ಕರ್ತವ್ಯ ನಿಭಾಯಿಸಲು ಸಾಧ್ಯ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ಅರವಿಂದ್ ಬೆಲ್ಲದ್
ಈ ಹಿಂದೆ ಅರವಿಂದ್ ಬೆಲ್ಲದ್ ಸಿಎಂ ರೇಸ್ನಲ್ಲಿದ್ದರು. ಕೊನೆಯ ಕ್ಷಣದಲ್ಲಿ ಬಸವರಾಜ್ ಬೊಮ್ಮಾಯಿ ಅವರಿಗೆ ಅದೃಷ್ಟ ಒಲಿದಿತ್ತು. ಇದೀಗ ಮತ್ತೆ ಅರವಿಂದ್ ಬೆಲ್ಲದ್ ಹೆಸರು ಮುನ್ನಲೆಗೆ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ 38 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಬೆಲ್ಲದ್ ಗೆಲುವು ದಾಖಲಿಸಿದ್ದಾರೆ. ಇದೀಗ ವಿಪಕ್ಷ ನಾಯಕನ ಸ್ಥಾನ ಪಡೆಯಲು ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ವಿಪಕ್ಷ ನಾಯಕನ ಸ್ಥಾನ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಬಿಜೆಪಿ ಮುಂದಾಗಬಹುದು ಎನ್ನಲಾಗುತ್ತಿದೆ.
ಡಾ.ಅಶ್ವತ್ಥನಾರಾಯಣ
ಹೌದು.. ಈಗ ಅಚ್ಚರಿಯ ಹಾಗೂ ಜಾತಿ ಅಧಾರಲ್ಲಿ ಕೇಳಿ ಬರುತ್ತಿರುವ ಮತ್ತೊಬ್ಬ ಪ್ರಮುಖ ನಾಯಕನ ಹೆಸರು ಅಂದ್ರೆ ಅದು ಡಾ.ಅಶ್ವತ್ಥನಾರಾಯಣ.. ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸನ್ನ ಹೊಂದಿರುವ ಅಶ್ವತ್ಥನಾರಾಯಣ ಅವರು, ಬಿಜೆಪಿಯ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಆದ್ರೆ ಈ ಬಗ್ಗೆ ಎಲ್ಲಿಯೂ ಕೂಡ ಅಶ್ವತ್ಥನಾರಾಯಣ ಅವರು ಮಾತನಾಡಿಲ್ಲ.
ಒಂದು ವೇಳೆ ಅಶ್ವತ್ಥನಾರಾಯಣ ಅವರಿಗೆ ವಿಪಕ್ಷ ನಾಯಕನ ಸ್ಥಾನ ಕೊಟ್ಟಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಒಕ್ಕಲಿಗ ಮತಗಳ ಕ್ರೋಢಿಕರಣ ಮಾಡಿಕೊಳ್ಳೋದಕ್ಕೆ ಕೂಡ ಸಹಾಕಾರಿಯಾಗಲಿದ್ದು, ಬಿಜೆಪಿಗೆ ಎರಡು ಪ್ರಮುಖ ಸಮುದಾಯಗಳ ಬೆಂಬಲ ಸಿಕ್ಕಹಾಗೆ ಆಗುತ್ತದೆ. ಹಾಗಾಗಿ ಈಗ ಬಿಜೆಪಿ ನಾಯಕರ ಕಣ್ಣು ಅಶ್ವತ್ಥ್ ನಾರಾಯಣ ಅವರ ಮೇಲೆ ಬಿದ್ದಿದೆ ಎನ್ನಲಾಗಿದೆ.
ಆರ್.ಅಶೋಕ್
ಅಶ್ವತ್ಥ್ನಾರಾಯಣ ಅವರನ್ನ ಹೊರತು ಪಡಿಸಿ ಮತ್ತು ಅಶ್ವತ್ಥ್ನಾರಾಯಣರಿಗಿಂತ ಬಿಜೆಪಿಯಲ್ಲಿ ಪ್ರಭಾವಶಾಲಿ ಒಕ್ಕಲಿಗ ನಾಯಕ ಎಂದರೆ ಅದು ಆರ್.ಅಶೋಕ್, ಈಗ ಸದ್ಯದ ಮಟ್ಟಿಗೆ ಬಿಜೆಪಿಯಲ್ಲಿ ಒಕ್ಕಲಿಗ ನಾಯಕರಿಗೆ ಕೊಂಚ ಮಣೆ ಹಾಕಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಇದೀಗ ಬಿಜೆಪಿಯಲ್ಲಿ ಒಕ್ಕಲಿಗ ನಾಯಕರಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ, ಆರ್ ಅಶೋಕ್ ಅವರಿಗೆ ವಿಪಕ್ಷ ನಾಯಕನ ಸ್ಥಾನವನ್ನ ಕೊಟ್ರೆ ಉತ್ತಮ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಆರ್. ಅಶೋಕ್ ಅವರೇ ವಿಪಕ್ಷ ನಾಯಕರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದರು ಸಾಧ್ಯತೆಗಳು ಬಹಳ ಕಡಿಮೆ ಇದೆ ಎಂದು ಹೇಳಲಾಗ್ತಾ ಇದೆ.
ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೂ ಶುರುವಾಗಿದೆ ಪೈಪೋಟಿ!
ಇನ್ನು ಇದರ ಜೊತೆಗೆ ಬಿಜೆಪಿಗೆ ರಾಜ್ಯಧ್ಯಕ್ಷ ಚಿಂತೆ ಕೂಡ ಕಾಡೋದಕ್ಕೆ ಶುರುವಾಗಿದೆ. ಹೌದು.. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಥಾನಕ್ಕೆ ಪರ್ಯಾಯ ನಾಯಕನ ಆಯ್ಕೆಗೆ ಈಗಾಗ್ಲೆ ಸಿದ್ದತೆಯನ್ನ ಬಿಜೆಪಿ ನಾಯಕರು ಮಾಡಿಕೊಂಡಿದ್ದಾರೆ. ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಕಾರಣವನ್ನು ಹುಡುಕಲು ಬಿಜೆಪಿ ನಾಯಕರು ಅನೌಪಚಾರಿಕ ಸಭೆಯನ್ನು ನಡೆಸಿದ್ದು, ಈ ಸಭೆಯಲ್ಲಿ ಜಾತಿ ಆಧರಿತವಾಗಿ ನಾಯಕನ ಆಯ್ಕೆಯ ಲೆಕ್ಕಾಚಾರವನ್ನ ಹಾಕಿಕೊಳ್ಳಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿದೆ.
ಹೀಗಾಗಿ ಈ ಹಿಂದೆ ಬಿಜೆಪಿ ನಡೆಸಿದ್ದ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ (ಲಿಂಗಾಯಿತ), ಶೋಭಾ ಕರಂದ್ಲಾಜೆ, ಸಿಟಿ ರವಿ (ಒಕ್ಕಲಿಗರು), ವಿ ಸೋಮಣ್ಣ (ಲಿಂಗಾಯಿತ) ಮತ್ತು ಸುನೀಲ್ ಕುಮಾರ್ (ಈಡಿಗ) ಅವರ ಹೆಸರುಗಳು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿವೆ. ಆದ್ರೆ ಇನ್ನು 10 ದಿನಗಳ ಒಳಗೆ ಈ ಆಯ್ಕೆ ಪ್ರಕ್ರಿಯೆ ಮುಗಿಸಬೇಕಾಗಿರೋದ್ರಿಂದ ಈ ಪ್ರಮುಖರಲ್ಲೇ ಯಾರನ್ನಾದರೂ ರಾಜ್ಯಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಟ್ಟಾರೆಯಾಗಿ ಈಗ ಬಿಜೆಪಿಯನ್ನ ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಬಿಜೆಪಿಯ ಒಳಗೆ ಬಲವಾಗಿ ಕಾಡ್ತಾ ಇದ್ದು, ಸಾಕಷ್ಟು ಮಂದಿ ಬಿಜೆಪಿಯ ರಾಜ್ಯಧ್ಯಕ್ಷ ಹಾಗೂ ಬಿಜೆಪಿಯ ವಿಪಕ್ಷ ನಾಯಕನ ಸ್ಥಾನಕ್ಕೆ ಈಗಾಗ್ಲೆ ಲಾಭಿ ನಡೆಸೋದಕ್ಕೆ ಪ್ರಾರಂಭ ಮಾಡಿದ್ದಾರೆ. ಆದ್ರೆ ಹೈಕಮಾಂಡ್ ಒಲವು ಯಾರ ಕಡೆಗೆ ಇರಲಿದೆ ಎಂಬುವುದೇ ಇಲ್ಲಿ ಯಕ್ಷ ಪ್ರಶ್ನೆಯಾಗಿ ಕಾಡ್ತಾ ಇದೆ.
ಸಂ-
Like
Dislike
Love
Angry
Sad
Funny
Wow
ಠೀಕೆಗಳು 0